ರಾಮುಲುವೂ ಸೋಮುಲುವೂ

ನಿರ್ಜನವಾದ ಬಯಲು
ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ
ಒಂದಿಷ್ಟು ಇಳಿಬೆಳಕು ಮಾತ್ರ
ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ
ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ)
ರಾಮುಲುವೂ ಸೋಮುಲುವೂ
ಅನುಮಾನಿಸುತ್ತ ಅನುಮಾನಿಸುತ್ತ ಪ್ರವೇಶಿಸುವರು
ಅಂಗಿಯ ಬದಿಗೆ ಜೋತಕೈ, ಕಚ್ಚೆಯ ಕೆಳಗೆ ದೊಂಗಾಲು
ತಲೆಯಿರುವಲ್ಲಿ ಮುಂಡಾಸು-ದೂರಕ್ಕೆ ಇಷ್ಟೆ-
ಒಂದು ಕ್ಷಣ ಮುಖ ಮುಖ ನೋಡುತ್ತ ನಿಲ್ಲುವರು
ನಂತರ ಲಗುಬಗನೆ
ಚೆಂಡುಗಳನ್ನರಸುತ್ತ ಬೇರೆ ಬೇರೆ ದಿಕ್ಕುಗಳಿಗೆ ಚದುರುವರು
ಹೀಗೆ ಅರಸುತ್ತ, ಕಂಡುಹುಡುಕುತ್ತ
ಹಲವು ಕಾಲದ ಮೇಲೆ
ಪಿಚ್ಚಿನಲ್ಲಿ ಇಬ್ಬರೂ ಭೇಟಿಯಾಗುವರು
ನಂತರ ವಿಕೆಟುಗಳನ್ನು ಹೆಕ್ಕಿ ತಬ್ಬಿಕೊಂಡು
ದಾಪುಗಾಲುಗಳನ್ನು ಹಾಕುತ್ತ ನಿಷ್ಕ್ರಮಿಸುವರು


ಇಬ್ಬನಿಯಾದರೋ ನೆಲಕ್ಕೆ ತೆಳ್ಳಗಿನ ಮುಸುಕು ಹಾಕುತ್ತಿದೆ
ಆಕಾಶದಲ್ಲಿ ನಾಲ್ಕಾರು ನಕ್ಷತ್ರಗಳು ಬಿದ್ದಿವೆ
ಆಲಸಿಗಳಾದ ಕತ್ತೆಗಳು ಮಾತ್ರ ಯಾವುದನ್ನೂ ಗಮನಿಸದೆ
ನಿಶ್ಚಲವಾಗಿ ನಿಂತಿವೆ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಮತ್ತೆ ಪ್ರವೇಶಿಸುವರು
ನೆಟ್ಟದೃಷ್ಟಿಯಿಂದ ಪಿಚ್ಚಿನ ಕಡೆಗೆ ದಪದಪನೆ ಧಾವಿಸುವರು
ಅದರ ಹುರಿಹಾಸನ್ನು
ಎಡಗಡೆಯಿಂದೊಬ್ಬ, ಬಲಗಡೆಯಿಂದೊಬ್ಬ
ಎತ್ತಿ ಸುತ್ತಲು ಮನಸ್ಸು ಮಾಡುವರು
ಸುತ್ತುತ್ತ ಉರುಳುರುಳಾಗಿ ಬೆಳೆಯುತ್ತಿರುವ ಹಾಸಿನ
ಉರುಳಿಗೆ ಕೈಗಳನ್ನೂ ನೆಲಕ್ಕೆ ಕಾಲುಗಳನ್ನೂ
ಊರಿ ನೂಕಿ ಸೆಟೆದು ಮುಗ್ಗರಿಸಿ ಬೀಳುವರು
ಕೆಳಗೊಬ್ಬ, ಮೇಲೊಬ್ಬ
ಬಿದ್ದರೂ ಬಿಡದೆ, ಕೈ ಬದಲಾಯಿಸುತ್ತ, ಏದುತ್ತ
ಎತ್ತಿ ಎಳೆದು ದೂರಕ್ಕೆ ಸಾಗಿಸುವರು


ಜನವರಿಯ ಇರುಳಾದರೋ ಯಥೇಷ್ಟ ಹೆಪ್ಪುಗಟ್ಟುತ್ತಿದೆ
ಮೈದಾನು ಯಾವುದು, ಮರ ಯಾವುದು ಗೊತ್ತಾಗುವುದೆ ಕಷ್ಟ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಭಾರವಾದ ಕೂಜೆಗಳನ್ನು ಎತ್ತಿಕೊಂಡು ಬಿಡದೆ ಪ್ರವೇಶಿಸುವರು
ಕುಸಿದುಹೋಗುತ್ತಿರುವ ಕಾಲುಗಳನ್ನು ಲೆಕ್ಕಿಸದೆ
ಪಿಚ್ಚಿನ ಕಡೆಗೆ ಚುರುಕಾಗಿ ಪುಟಪುಟನೆ ಹೆಜ್ಜೆ ಹಾಕುವರು
ಬಾಯಲ್ಲಿ ಒಂದೊಂದು ಬೀಡಿ
ಜೋಡಿ ನಕ್ಷತ್ರಗಳಂತೆ ಉರಿಯುತ್ತ
ರಾಮುಲುವೂ ಸೋಮುಲುವೂ
ಧೂಳೆಬ್ಬಿಸಿ ಸುಸ್ತಾಗಿ ಮಲಗಿದ ಬಯಲ ಮೈಗೆ
ನೀರು ಸಿಂಪಡಿಸಲು ತೊಡಗುವರು
ಕ್ರಮೇಣ ದಟ್ಟವಾದ ಕತ್ತಲು ಎಲ್ಲವನ್ನೂ ಆವರಿಸುವುದು
ಸ್ವಲ್ಪ ಹೊತ್ತಿನಲ್ಲೆ ಒಂದು ಬೀಡಿ ನಂದುವುದು
ನಂತರ ಇನ್ನೊಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಡೋದೇನು
Next post ಕನ್ನಡಮ್ಮ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys